ನೀವು ಯಾವುದೇ ಶೈಕ್ಷಣಿಕ ಕೇಂದ್ರವನ್ನು ಪ್ರಾರಂಭಮಾಡಿ, ಅದರ ಮೂಲ ಉದ್ದೇಶ ವ್ಯವಸ್ಥೆಯನ್ನು ಹಾಳುಮಾಡುವುದಾಗಿರಬಾರದು, ನಮ್ಮ ಹಳ್ಳಿಗಳು ಉಳಿಯಬೇಕು, ಅವುಗಳ ಬೆಳವಣಿಗೆಗೆ ಪೂರಕ ಶಿಕ್ಷಣ ಕೊಡಿ, ನಮ್ಮ ಹಳ್ಳಿಯ ಸೊಗಡನ್ನು ಉಳಿಸುವ ಬೆಳೆಸುವಂತಹ ಶಿಕ್ಷಣಕೊಡಿ ಅಂದರು.
ಒಂದು ರೀತಿಯಿಂದ ಅವರು ಹೇಳಿದ್ದು ಸರಿ ಎಂದು ಕಾಣುತ್ತದೆ. ಇಂದು ನಮ್ಮ ಹಳ್ಳಿಗಳು ವಯಸ್ಕರ ಗೂಡಾಗುತ್ತಿದೆ, ಹೊಸ ತಲೆಮಾರಿನ ನಮ್ಮಂತಹ ಜನರು, ಅವಕಾಶದ ಬೆನ್ನೇರಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದೇವೆ. ನಮ್ಮ ಮಕ್ಕಳಿಗೆ ಹಳ್ಳಿಯ ಸೊಗಡಿನ ಗಂಧವೇ ಇಲ್ಲವಾಗುತ್ತಿದೆ. ನಾವು ಅನುಭವಿಸಿದ ಆ ಹಳ್ಳಿಗಾಡಿನ ಸುಖ ನಮ್ಮ ಮಕ್ಕಳಿಗೆ ಇಲ್ಲವಾಗಿದೆ. ಮನೆಯಿಂದ ಹೊರಗೆ ಹೋದರೆ ಶಾಲೆ, ಜನಸಂಧಣಿ, ಅದೇ ಕಲುಷಿತ ವಾತಾವರಣ. ಅಜ್ಜಿಯ ಹಳೆಯ ಹಾಡಿನ ಕಂಪು, ಅಜ್ಜನಜೊತೆ ಓಡಾಡುವ ಅವಕಾಶ ಎಷ್ಟು ಮಕ್ಕಳಿಗೆ ಇದೆ ಹೇಳಿ. ಅವೆಲ್ಲಾ ನಮ್ಮಕಾಲದಲ್ಲಿ ಆಯಿತು ಅಲ್ಲವೇ?
ಒಂದು ರೀತಿಯಲ್ಲಿ ನಾವೆಲ್ಲಾ ಹೊಸ ವ್ಯವಸ್ಥೆಯ ಬಲಿಪಶುಗಳು. ನಮ್ಮ ಕಿರಿವಯಸ್ಸಿನಲ್ಲಿ ನಾವು ಅನುಭವಿಸಿದ ಬಡತನ, ಇಲ್ಲಿನ ವ್ಯವಸ್ಥೆಯ ಕೊರತೆ ನಮ್ಮನ್ನು ಆಕಡೆಗೆ ಸೆಳೆದಿದೆ. ಆದರೆ ಇಂದು ಆ ಪರಿಸ್ಥಿತಿ ನಮ್ಮ ಹಳ್ಳಿಗಳಲ್ಲಿಲ್ಲ, ಎಲ್ಲೆಂದರಲ್ಲಿ ರಸ್ತೆಗಳು, ಜೊತೆಯಲ್ಲಿ ವಾಹನ ವ್ಯವಸ್ಥೆ , ಬೇಕುಬೇಕಾದ ಎಲ್ಲವುಗಳೂ ನಮ್ಮಲ್ಲಿವೆ. ಆದರೂ ಈ ರೀತಿಯ ಪಲಾಯನ ಏಕೆ? ಇಲ್ಲಿದ್ದುಕೊಂಡೇ ನಮ್ಮನ್ನು ರೂಪಿಸಿಕೊಳ್ಳುವ ಶಿಕ್ಷಣದ ಕೊರತೆ, ಅಥವಾ ನಮ್ಮವರ ಜೊತೆ ನಾವೂ ಹೋಗೋಣ ಎನ್ನುವ ಸೆಳೆತ, ಅಥವಾ ಪಟ್ಟಣದ ಆಧುನಿಕತೆಯ ಸೆಳೆತ, ಇವೆಲ್ಲ ಪಲಾಯನಕ್ಕೆ ಕಾರಣ.
ಇಂತಹ ಮಾನಸಿಕತೆ ನಮ್ಮ ಮಕ್ಕಳಲ್ಲಿ ಇಲ್ಲವಾಗಬೇಕು, ಅಂತಹ ಶಿಕ್ಷಣ ವ್ಯವಸ್ಥೆ ಬರಬೇಕು ಎನ್ನುವುದು ಅವರ ಭಿಪ್ರಾಯವಾಗಿರಬಹುದು. ಹೊಸ ದೂರದೃಷ್ಟಿಗೆ ದಿಶೆ ನೀಡಿದ ಹಿರಿಯರಿಗೆ ಧನ್ಯವಾದಗಳು.
No comments:
Post a Comment