ನಾನು ಹಲವು ಸಾರಿ ಈ “ಕನಸು” ಎನ್ನುವ ಪದದ ಬಗ್ಗೆ, ಅದರ ಅರ್ಥ ವಿವರಣೆಯ ಬಗ್ಗೆ, ಅದರ ವ್ಯಾಪ್ತಿಯ ಬಗ್ಗೆ, ವಿಚಾರ ಮಾಡ್ತಾ ಇರ್ತೇನೆ. ಬಹುಷಃ ಕನಸೇ ಇಲ್ಲದಿದ್ದರೆ ಈ ಜಗತ್ತಿನ ಅತ್ಯದ್ಭುತ ವೈಜ್ನಾನಿಕ ಅನ್ವೇಷಣೆಗಳು ಇರುತ್ತಿರಲಿಲ್ಲ, ಈ ಜಗತ್ತಿನಲ್ಲಿ ಇಷ್ಟೆಲ್ಲಾ ವೈವಿದ್ಯತೆಗಳು ಇರುತ್ತಿರಲಿಲ್ಲ, ಹಾಗೆಯೇ ಬಹುಷ ನಮ್ಮ ಅಸ್ತಿತ್ವವೇ ಇರುತ್ತಿರಲಿಲ್ಲವೇನೊ....
ಹಾಗಾಗಿ ನಾವು ಈಗ ಮಾಡಬೇಕಾದದ್ದು, ನಮ್ಮ ಮಕ್ಕಳಿಗೆ ಕನಸು ಕಾಣಲು ಬಿಡುವುದು. ಅವರನ್ನು ಅವರಂತೆಯೇ ಇರಲು ಬಿಡುವುದು. ಒಂದು ಸಣ್ಣ ಎಳೆ ಚಿಗುರಿಗೂ ಕೂಡ ಒಂದು ಕನಸಿರುತ್ತದಂತೆ, ಅದೆಂದರೆ, ತಾನು ಚಿಗುರೊಡೆದು ಹೆಮ್ಮರವಾಗಿ ಬೆಳೆದು ಫಲ ಕಾಣಬೇಕೆನ್ನುವುದು. ಹಾಗಾಗಿ ಅದು ಚಿಗುರೊಡೆಯುವುದನ್ನು ನೀವು ತಪ್ಪಿಸೋದಕ್ಕಾಗಲ್ಲ, ನೀವು ಒಂದು ಕಡೆ ಚಿವುಟಿದರೆ ಅದು ಇನ್ನೊಂದೆಡೆ ಟಿಸಿಲೊಡೆಯುತ್ತದೆ. ಹಾಗಾಗಿ ನಮ್ಮ ಮಕ್ಕಳ ಬದುಕಿನಲ್ಲೂ ಒಂದು ರೀತಿಯ ಸಹಜತೆ ಇರಲಿ. ನಮ್ಮ ಅಹಮಿಕೆಯ ಉಗುರಿನಿಂದ ಅವರ ಕನಸಿನ ಚಿಗುರನ್ನು ಚಿವುಟುವುದು ಬೇಡ.
ಆದರೆ ನಮ್ಮ ಬಾದ್ಯತೆ ಇರುವುದು ಅವರಿಗೆ ಧನಾತ್ಮಕವಾಗಿ ಬೆಳೆಯುವ ಪರಿಸರ ನೀಡುವುದು. ಆದಷ್ಟು ಮಟ್ಟಿಗೆ ಹೊರಗಿನ ಪ್ರಾಣಿಗಳು ತಿನ್ನದಂತೆ ಗಿಡಗಳಿಗೆ ಟ್ರೀ ಗಾರ್ಡ್ ಇಡುತ್ತಾರಲ್ಲಾ.... ಹಾಗೆ. ನಾವು ನಮ್ಮ ಮಕ್ಕಳ ರಕ್ಷಕರಾಗಬಹುದು, ವಿನಃ, ಅವರ ಕನಸಿಗೆ ಭಂಗ ತರುವ ಯಾವ ಹಕ್ಕೂ ಕೂಡ ನಮಗಿಲ್ಲ.