Wednesday, May 26, 2010

ವ್ಯವಸ್ಥೆಗಳೇಕೆ ಪತನಹೊಂದುತ್ತಿವೆ?

ನಮ್ಮ ಹಳೆಯ ತಲೆಮಾರಿನ ಸಾಂಸ್ಕೃತಿಕ ಶೈಕ್ಷಣಿಕ ಕೇಂದ್ರಗಳಲ್ಲಿಯ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಎಲ್ಲರ ಮನಸ್ಸಿನಲ್ಲೂ ಬಂದುಹೋಗುವ ಪ್ರಶ್ನೆ ಇದು. ಅದರ ಸ್ಥಾಪಕರು ಯಾವ ಉದ್ದೇಶದಿಂದ ಸಂಸ್ಥೆಯನ್ನೋ, ಸಾಂಸ್ಕೃತಿಕ ಕೇಂದ್ರವನ್ನೋ ಕಟ್ಟಿದರೋ, ಅದಕ್ಕೆ ವ್ಯತಿರಿಕ್ತವಾಗಿ ಅಲ್ಲಿನ ವಾತವರಣ ಕಲುಷಿತವಾಗುತ್ತಿದೆ. ನಾನು ಯಾವುದೇ ಒಂದು ಸಂಸ್ಥೆಯನ್ನು ಬೊಟ್ಟುಮಾಡಿ ಹೇಳುತ್ತಿಲ್ಲ, ನಮ್ಮ ವ್ಯವಸ್ಥೆಯಲ್ಲಿ ಕಾಣುತ್ತಿರುವ ಒಟ್ಟಭಿಪ್ರಾಯ ಇದು.

ಪೂಜನೀಯ ಸ್ಥಳಗಳೋ, ಶ್ರದ್ಧಾಕೇಂದ್ರಗಳೋ ಅವು ಯಾವುದೇ ಆಗಿರಬಹುದು, ಅಲ್ಲಿಗೆ ಹೋಗುವ ಮೊದಲು ನಮ್ಮ ಮನಸ್ಸಿನಲ್ಲಿ ಯಾವುದೋ ತೆರನಾದ ಚೈತನ್ಯಶೀಲ ಕಲ್ಪನೆಗಳನ್ನು ಹೊತ್ತು ಹೋಗುತ್ತೇವೆ. ಅಲ್ಲಿಂದ ತಿರುಗಿ ಬರುವಾಗ ಮನಸ್ಸಿನ ತುಂಬಾ ನಿರಾಸೆ. ಇದೆಲ್ಲಕ್ಕೆ ಕಾರಣ ಅಲ್ಲಿಯ ಕಲುಷಿತ ವಾತಾವರಣ.

ಸಾಮಾಜಿಕ ಸಾಮರಸ್ಯಕ್ಕೆ, ಜನಮಾನಸದ ಔನ್ನತ್ಯಕ್ಕೆ ಇಂತಹ ಕೇಂದ್ರಗಳು ಕಾರಣವಾಗಬೇಕು. ಆದರೆ ಅದರ ಫಲಶ್ರುತಿಯೇ ಬೇರೆ ಆಗುತ್ತಿದೆ. ಯಾವುದೇ ಒಂದು ಸಮಾಜ ಹಿತ ಕಾರ್ಯ ಆಗಬೇಕಾದಾಗ ಅದಕ್ಕೆ ಕಾರಣಕರ್ತೃ ಸಮಾಜ, ಅದರ ಸಹಮತಿ. ಒಪ್ಪಿಕೊಂಡ ತತ್ವದ ಜೊತಯಲ್ಲಿ ಇನ್ನೊಂದನ್ನು ಸೇರಿಸುವುದು ಸುಲಭ, ಅದು ಸಮಷ್ಠಿಯಾಗಿರಬೇಕಷ್ಠೇ. ತತ್ವ ಸಿದ್ಧಾಂತಕ್ಕೆ ಬದ್ಧರಾದ ವ್ಯಕ್ತಿಗಳ ಸಾಮಿಪ್ಯ ಸಿಗುವುದು ಇಂತಹ ಕೇಂದ್ರಗಳ ಮೂಲಕ ಮಾತ್ರ. ಅದು ಸಮಷ್ಠಿಯಾಗಿರಬೇಕಷ್ಟೇ.

Tuesday, May 25, 2010

ಉಸ್ತಾದ್ ಹಮೀದ್ ಖಾನ್

ಶ್ರೀಯುತರು ನನ್ನ ಗುರುಗಳು ಅಂತ ಹೇಳೋದಕ್ಕೆ ನನಗೆ ತುಂಬಾಹೆಮ್ಮೆ. ಇಂತಹ ಖ್ಯಾತರನ್ನು ಅವರ ವಾದನ ಸುಧೆಯನ್ನು ಸವಿದದ್ದು ಯಲ್ಲಾಪುರದ ಜನತೆಯ ಭಾಗ್ಯ.

ಉಸ್ತಾದ್ ಹಮೀದ್ ಖಾನ್ ಅವರು ಇಂದೋರ್ ಬಿಕಾನೇರ್ ಘರಾನಾ ದ ಸಿತಾರ್ ವಾದಕರು. ಇವರು ಸಿತಾರ್ ರತ್ನ ರೆಹಮತ್ ಖಾನ್ ಅವರ ೬ ನೆಯ ಪೀಳಿಗೆ. ಸಿತಾರ್ ವಾದನದಲ್ಲಿ ಇವರು ತೋರುವ ನಿಷ್ಠೆ ಅತ್ಯದ್ಭುತ. ಅವರ ಗರಡಿಯಲ್ಲಿ ಪಳಗಿದ ಅವರ ಮಗ ಮೊಹಸಿನ್ ಖಾನ್ ಒಬ್ಬ ಅಧ್ಭುತ ಯುವ ಪ್ರತಿಭೆ. ಕೇವಲ ೬ ನೆಯ ವಯಸ್ಸಿನಲ್ಲಿ ಸಿತಾರ್ ಅನ್ನು ಹಿಡಿದ ಈತ ಈಗ ಕರ್ನಾಟಕದಲ್ಲಿ ಸಿತಾರ್ ಪ್ರೇಮಿಗಳ ಮನೆಮಾತು.

ಆದರೆ ನಾನು ಈಗ ಹೇಳಹೊರಟಿರುವುದು ಕೇವಲ ಹಮೀದ್ ಖಾನ್ ಅವರ ಸಂಗೀತ ಸಾಧನೆಯನ್ನಲ್ಲ. ಅವರ ಸಮಾಜ ಸೇವೆಯ ಇನ್ನೊಂದು ಮುಖವನ್ನು. ನಮ್ಮ ಸಂವಿತ್ ಗೆ ಮೂಲ ಪ್ರೇರಣೆಯೇ ಶ್ರೀಯುತರು. ಅದಕ್ಕಾಗಿಯೇ ನನ್ನ ಮತ್ತು ಗುರುಗಳ ಸಾಮರಸ್ಯ ಅವಿನಾಭಾವವಾಗಿದೆ. ಶ್ರೀಯುತರು ಕಲ್ಕೇರಿ ಶಾಲೆಯ ಏಳ್ಗೆಯಲ್ಲಿ ತಮ್ಮನ್ನು ಬಹಳಷ್ಟು ಸಮಯದಿಂದ ತೊಡಗಿಸಿಕೊಂಡು ಬಂದವರು. ಆ ಅನಾಥ ಮಕ್ಕಳ ಜೊತೆ ಸಮಯ ಕಳೆದವರು. ಇಂತಹ ಪೂಜ್ಯರು ನಮ್ಮ ಜೊತೆ ಇದ್ದು, ನಮ್ಮ ಸಂವಿತ್ ಅನ್ನು ಉದ್ಘಾಟನೆ ಮಾಡಿದ್ದರಿಂದ. ಮುಂಬರುವ ದಿನಗಳಲ್ಲಿ ನಾವೂ ಕೂಡಾ ಅವರ ಆಶಯಗಳನ್ನು ಮೈಗೂಡಿಸಿಕೊಳ್ಲೋಣ, ಎನ್ನಬಹುದಲ್ಲವೇ?

ಎಲ್ಲಿ ಅವಕಾಶಗಳಿವೆಯೋ, ಸೌಲಭ್ಯಗಳಿವೆಯೋ ಅಲ್ಲಿ ನಮ್ಮ ಅವಶ್ಯಕತೆ ಏನಿದೆ? ಎಲ್ಲಿ ನಿಜವಾದ ಅವಶ್ಯಕತೆ ಇದೆಯೋ, ಯಾರು ನಿರ್ಗತಿಕರೋ ಅವರನ್ನು ತಲುಪುವ ಪ್ರಯತ್ನ ನಮ್ಮದಾಗಲಿ. ಆಗ ಶಿಕ್ಷಣ ಸಾರ್ಥಕತೆಯನ್ನು ಕಾಣಲಿದೆ.

Sunday, May 23, 2010

ವ್ಯವಸ್ಥೆಯ ಜೊತೆ ನಾವು

ಕೆಲ ದಿನಗಳ ಹಿಂದೆ ಒಬ್ಬ ಸಮಾಜದ ಗಣ್ಯ ವ್ಯಕ್ತಿಗಳೊಬ್ಬರ ಸಾಮಿಪ್ಯವಾಗಿತ್ತು, ಅವರ ಜೊತೆ ನನ್ನ ಕನಸನ್ನು ಹಂಚಿಕೊಂಡೆ, ನನ್ನ ಉದ್ದೇಶಗಳ ಬಗ್ಗೆ ಸಲಹೆ ಕೇಳಿದೆ, ಅವರ ಅಭಿಪ್ರಾಯದ ಸಾರಾಂಶವಿಷ್ಟು.......

ನೀವು ಯಾವುದೇ ಶೈಕ್ಷಣಿಕ ಕೇಂದ್ರವನ್ನು ಪ್ರಾರಂಭಮಾಡಿ, ಅದರ ಮೂಲ ಉದ್ದೇಶ ವ್ಯವಸ್ಥೆಯನ್ನು ಹಾಳುಮಾಡುವುದಾಗಿರಬಾರದು, ನಮ್ಮ ಹಳ್ಳಿಗಳು ಉಳಿಯಬೇಕು, ಅವುಗಳ ಬೆಳವಣಿಗೆಗೆ ಪೂರಕ ಶಿಕ್ಷಣ ಕೊಡಿ, ನಮ್ಮ ಹಳ್ಳಿಯ ಸೊಗಡನ್ನು ಉಳಿಸುವ ಬೆಳೆಸುವಂತಹ ಶಿಕ್ಷಣಕೊಡಿ ಅಂದರು.

ಒಂದು ರೀತಿಯಿಂದ ಅವರು ಹೇಳಿದ್ದು ಸರಿ ಎಂದು ಕಾಣುತ್ತದೆ. ಇಂದು ನಮ್ಮ ಹಳ್ಳಿಗಳು ವಯಸ್ಕರ ಗೂಡಾಗುತ್ತಿದೆ, ಹೊಸ ತಲೆಮಾರಿನ ನಮ್ಮಂತಹ ಜನರು, ಅವಕಾಶದ ಬೆನ್ನೇರಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದೇವೆ. ನಮ್ಮ ಮಕ್ಕಳಿಗೆ ಹಳ್ಳಿಯ ಸೊಗಡಿನ ಗಂಧವೇ ಇಲ್ಲವಾಗುತ್ತಿದೆ. ನಾವು ಅನುಭವಿಸಿದ ಆ ಹಳ್ಳಿಗಾಡಿನ ಸುಖ ನಮ್ಮ ಮಕ್ಕಳಿಗೆ ಇಲ್ಲವಾಗಿದೆ. ಮನೆಯಿಂದ ಹೊರಗೆ ಹೋದರೆ ಶಾಲೆ, ಜನಸಂಧಣಿ, ಅದೇ ಕಲುಷಿತ ವಾತಾವರಣ. ಅಜ್ಜಿಯ ಹಳೆಯ ಹಾಡಿನ ಕಂಪು, ಅಜ್ಜನಜೊತೆ ಓಡಾಡುವ ಅವಕಾಶ ಎಷ್ಟು ಮಕ್ಕಳಿಗೆ ಇದೆ ಹೇಳಿ. ಅವೆಲ್ಲಾ ನಮ್ಮಕಾಲದಲ್ಲಿ ಆಯಿತು ಅಲ್ಲವೇ?

ಒಂದು ರೀತಿಯಲ್ಲಿ ನಾವೆಲ್ಲಾ ಹೊಸ ವ್ಯವಸ್ಥೆಯ ಬಲಿಪಶುಗಳು. ನಮ್ಮ ಕಿರಿವಯಸ್ಸಿನಲ್ಲಿ ನಾವು ಅನುಭವಿಸಿದ ಬಡತನ, ಇಲ್ಲಿನ ವ್ಯವಸ್ಥೆಯ ಕೊರತೆ ನಮ್ಮನ್ನು ಆಕಡೆಗೆ ಸೆಳೆದಿದೆ. ಆದರೆ ಇಂದು ಆ ಪರಿಸ್ಥಿತಿ ನಮ್ಮ ಹಳ್ಳಿಗಳಲ್ಲಿಲ್ಲ, ಎಲ್ಲೆಂದರಲ್ಲಿ ರಸ್ತೆಗಳು, ಜೊತೆಯಲ್ಲಿ ವಾಹನ ವ್ಯವಸ್ಥೆ , ಬೇಕುಬೇಕಾದ ಎಲ್ಲವುಗಳೂ ನಮ್ಮಲ್ಲಿವೆ. ಆದರೂ ಈ ರೀತಿಯ ಪಲಾಯನ ಏಕೆ? ಇಲ್ಲಿದ್ದುಕೊಂಡೇ ನಮ್ಮನ್ನು ರೂಪಿಸಿಕೊಳ್ಳುವ ಶಿಕ್ಷಣದ ಕೊರತೆ, ಅಥವಾ ನಮ್ಮವರ ಜೊತೆ ನಾವೂ ಹೋಗೋಣ ಎನ್ನುವ ಸೆಳೆತ, ಅಥವಾ ಪಟ್ಟಣದ ಆಧುನಿಕತೆಯ ಸೆಳೆತ, ಇವೆಲ್ಲ ಪಲಾಯನಕ್ಕೆ ಕಾರಣ.

ಇಂತಹ ಮಾನಸಿಕತೆ ನಮ್ಮ ಮಕ್ಕಳಲ್ಲಿ ಇಲ್ಲವಾಗಬೇಕು, ಅಂತಹ ಶಿಕ್ಷಣ ವ್ಯವಸ್ಥೆ ಬರಬೇಕು ಎನ್ನುವುದು ಅವರ ಭಿಪ್ರಾಯವಾಗಿರಬಹುದು. ಹೊಸ ದೂರದೃಷ್ಟಿಗೆ ದಿಶೆ ನೀಡಿದ ಹಿರಿಯರಿಗೆ ಧನ್ಯವಾದಗಳು.

Friday, May 21, 2010

ಶಿಕ್ಷಣದ ಅರ್ಥ

ಬಹಳ ದಿನದಿಂದ ನನ್ನ ಮನಸ್ಸಿನಲ್ಲಿ ಬಂದುಹೋಗುತ್ತಿರುವ ಪ್ರಶ್ನೆ, ಇಂದು ನಾವು ಕಲಿಯುತ್ತಿರುವ ಶಿಕ್ಷಣ ನಿಜವಾದ ಸರ್ವತೋಮುಖ ಶಿಕ್ಷಣವೇ ಅನ್ನುವುದು.
ಇಂದು ನಾವು ಕೊಡುತ್ತಿರುವ ಶಿಕ್ಷಣ ಕೇವಲ ಬೌದ್ಧಿಕ ಮಟ್ಟದ ಶಿಕ್ಷಣ ಎಂಬಂತೆ ನನಗೆ ಭಾಸವಾಗುತ್ತಿದೆ. ಇಲ್ಲದೇ ಹೋದಲ್ಲಿ ಇಂದು ನಾವುನೋಡುತ್ತಿರುವ ಅಪ್ರಾಪ್ತವಯಸ್ಕರ ಆತ್ಮಹತ್ಯೆಗಳು, ಅಸಪರ್ಪಕ ಚಿಂತನೆಗಳು, ವಿಕ್ಷಿಪ್ತ ನಡವಳಿಕೆಗಳು ಇವೆಲ್ಲಕ್ಕೆ ಕಾರಣಗಳೇನು? ವಿಚಾರಿಸಿದ್ದೇವೆಯೇ.
ಸರಿ, ನಾವೇನೋ ಬೌದ್ಧಿಕವಾಗಿ ಮುನ್ನಡೆಯುತ್ತಿದ್ದೇವೆ, ನಮ್ಮ ಮಕ್ಕಳ ಐಕ್ಯೂ ಹೆಚ್ಚಾಗಿದೆ, ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯುತ್ತಿದ್ದಾರೆ ಇನ್ನೇನು ಬೇಕು ಎನ್ನುವುದು ನಮ್ಮ ಬಹುತೇಕ ಪಾಲಕರ ಅಭಿಮತ. ಆದರೆ ಅದೇ ಸಮಯದಲ್ಲಿ ನಮ್ಮ ಮಕ್ಕಳು ಎಮ್ ಕ್ಯೂ (Moral Quotient) ವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನಮಗನಿಸುವುದಿಲ್ಲವೇ? ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅನಿಸುವುದಿಲ್ಲವೇ? ಅನಿಸುತ್ತದೆ ತಾನೇ?
ಹಾಗಾದಲ್ಲಿ ನಾವು ಎಲ್ಲಿ ಎಡವುತ್ತಿದ್ದೇವೆ ಎನ್ನುವ ಪ್ರಶ್ನೆ ಸ್ವಾಭಾವಿಕವಾಗಿ ಬರುತ್ತದೆ. ಉತ್ತರ ನಮ್ಮಲ್ಲಿಯೇ ಇದೆ, ಇದಕ್ಕೆ ಕಾರಣ ನಮ್ಮ ಅಸ್ವಾಭಾವಿಕ ಶಿಕ್ಷಣ ಶೈಲಿ, ಪಠ್ಯಕ್ರಮ. ಜೊತೆಯಲ್ಲಿ ನಮ್ಮ ಪರಿಸರ, ಅದು ಮನೆಯಲ್ಲಿರಬಹುದು ಅಥವಾ ಹೊರ ಪ್ರಪಂಚದ ಸೆಳೆತವಿರಬಹುದು. ಅದನ್ನು ಗಮನಿಸಿ ಯಾವುದನ್ನು ಪುರಸ್ಕರಿಸಿ ಅಳವಡಿಸಿಕೊಳ್ಳಬೇಕು, ಯಾವುದು ಪರಿತ್ಯಜ್ಯವೋ ಅದನ್ನು ನಿರ್ಲಕ್ಷಿಸಬೇಕೆಂಬ ಧನಾತ್ಮಕ, ಋಣಾತ್ಮಕ ವಿವೇಚನೆಯನ್ನು ಬೆಳೆಸದೇ ಇರುವುದು.

Sunday, May 16, 2010

ನಮಗಾಗಿ, ನಮ್ಮೆಲ್ಲರಿಗಾಗಿ ಈ ಸಂವಿತ್

ಸಹೃದಯರೇ,
ನಾವೆಲ್ಲಾ ಹುಟ್ಟಿ, ಅಡಿಯಿಟ್ಟು, ಕಲಿತು, ಬೆಳೆದ ನಮ್ಮೆಲ್ಲರ ಈ ಯಲ್ಲಾಪುರ ಎಲ್ಲರಿಗೂ ಪ್ರೀತಿಯೇ ತಾನೇ? ನಾವು ಈಗ ಎಲ್ಲೇ ಇರಲಿ, ಯಾವ ಕ್ಷೇತ್ರದಲ್ಲೇ ಇರಲಿ, ನಮ್ಮೆಲ್ಲರನ್ನೂ ಭಾವನಾತ್ಮಕವಾಗಿ, ಬೆಸೆಯುವ ಶಕ್ತಿ, ಚೈತನ್ಯ ಈ ನೆಲದಲ್ಲಿದೆ. ನಾವೆಲ್ಲಾ ನಮ್ಮ ಊರಿಗೆ ಬಂದಾಗ, ಇಲ್ಲಿ ನಮ್ಮನ್ನು ಓಲೈಸುವವರಿದ್ದಾರೆ, ಮಾನಸಿಕವಾಗಿ ಬೆಂಬಲಿಸುವವರಿದ್ದಾರೆ. ಆ ಶಕ್ತಿಯೇ ನಮ್ಮೆಲ್ಲರನ್ನೂ ಮುನ್ನಡೆಸಿದೆ.

ಇಂತಹ ಸಾವಿರಾರು ಸಂಖ್ಯೆಯ ಯುವಕರ, ಹಿರಿಯರ ಒಂದು ದೊಡ್ಡ ಗುಂಪು ಯಲ್ಲಾಪುರದಿಂದ ದೂರದ ಊರುಗಳಲ್ಲಿ ನೆಲೆಸಿದೆ. ನಾವೆಲ್ಲಾ ಕಲಿತು ಬೆಳೆದ ನಮ್ಮ ಊರಿನ ಜನಗಳಿಗಾಗಿ ಏನನ್ನಾದರೂ ಮಾಡಬೇಕೆಂದು ಒಲವು ಹೊಂದಿರುವ ನಮ್ಮ ನಿಮ್ಮಂತಹ ಜನರಿದ್ದಾರೆ. ಇಂಥಹ ಜನಗಳ ಒಂದು ಭಾಗವಾದ ನನಗೆ ಬಂದಂತಹ ಯೋಚನೆಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವ ಮನಸ್ಸು ಮಾಡುತ್ತಿದ್ದೇನೆ.

ಇಂದಿಗೆ ಸುಮಾರು ೨ ವರ್ಷಗಳ ಹಿಂದೆ ನಾನು ನಮ್ಮ ಭಾಗದ ಜನರ ಒಳಿತಿಗಾಗಿ ಒಂದು ಸಂಘಟನೆಯನ್ನು ಹುಟ್ಟುಹಾಕುವ ಮನಸ್ಸು ಮಾಡಿದೆ. ಆದರೆ ಅದಕ್ಕೆ ಬೇಕಾಗುವ ಪ್ರಮಾಣದ ಹಣಬಲ ನನ್ನ ಬಳಿ ಇರಲಿಲ್ಲ. ಆದರೆ ಮಾಡಬೇಕೆನ್ನುವ ಅದಮ್ಯ ಉತ್ಸಾಹ ಮಾತ್ರ ಇತ್ತು. ಇಂಥಹ ಸಮಾಜಹಿತ ಕಾರ್ಯಕ್ಕೆ ಹಣದ ಜೊತೆಗೆ ಜನರ ಬೆಂಬಲವೂ ಅವಶ್ಯವೇ ತಾನೇ? ಹಾಗಾಗಿ ಈ ಬಗ್ಗೆ ಬಹಳಷ್ಟು ಜನರ ಸಂಪರ್ಕ ಮಾಡಿದೆ. ನಾನು ಸಂಪರ್ಕಿಸಿದ ಎಲ್ಲರಿಂದಲೂ ಸಕಾರಾತ್ಮಕ ಉತ್ತರವೇನೂ ಬಂತು. ಆದರೆ ನನ್ನ ಸಂಕಲ್ಪ ಮಾತ್ರ ಯೋಚನೆಯ ಸ್ತರದಲ್ಲಿಯೇ ಉಳಿಯಿತು. ಆದರೆ ಕಳೆದ ಹಲವು ವರ್ಷಗಳಿಂದ ನಾನು ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ಕೊಡುವದನ್ನು ಮುಂದುವರಿಸಿಕೊಂಡು ಬರುತ್ತಿದ್ದೆ. ಇಂತಹ ಅಲ್ಪಪ್ರಮಾಣದ ಸಹಾಯದಿಂದ ದೊಡ್ಡ ಸಾಧನೆಯೇನೂ ಆಗದೇ ಇದ್ದರೂ, ನನ್ನ ಮಟ್ಟಿಗೆ ಅದು ಬಹಳ ಅಮೂಲ್ಯ ಮತ್ತು ಅದರಿಂದ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ ನೆಮ್ಮದಿ ಸಿಗುತ್ತಿತ್ತು.

ಈ ಎಲ್ಲಾ ಯೋಚನೆಗಳಿಗೆ, ನಾನು ಮತ್ತು ನನ್ನ ಹಲವು ಮಿತ್ರರು ಸೇರಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ, ಕಳೆದ ೧೭-೦೪-೨೦೧೦ ರಂದು ಮುನ್ನುಡಿಯನ್ನು ಬರೆದಿದ್ದೇವೆ. ನಮ್ಮ ಘನೋದ್ದೇಶಗಳಿಗಾಗಿ ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸುತ್ತಿರುವ ಸಂಸ್ಥೆಯ ಹೆಸರು

"ಸಂವಿತ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನ (ರಿ)"

ಇದು ನಮ್ಮ ನಿಮ್ಮೆಲ್ಲರ ಸಂಸ್ಥೆ, ಉತ್ತಮ ಉದ್ದೇಶಗಳಿಗಾಗಿ ಎಲ್ಲರನ್ನೂ ಒಟ್ಟಾಗಿ ಸೇರಿಸುವಂತಹ ನೆಲೆ. ಈ ಸೂರಿನಡಿಯಲ್ಲಿ ಕೆಲಸಮಾಡಲು ತಾವೆಲ್ಲಾ ಆಸಕ್ತಿ ತೋರಿಸುವಿರೆಂದು ನನ್ನ ಭಾವನೆ. ಇಂಥಹ ಸಂಸ್ಥೆಯನ್ನು ಕಾನೂನಿನ ಚೌಕಟ್ಟಿನೊಳಗೆ ತರಲು ಇದರ ನೋಂದಣಿಯನ್ನೂ ಮಾಡಲಾಗಿದೆ. ಜೊತೆಯಲ್ಲಿ ಆದಾಯಕರ ವಿನಾಯತಿಯನ್ನು ದಾನಿಗಳಿಗೆ ಕೊಡಮಾಡುವ ಸಲುವಾಗಿ ಆದಾಯಕರ ಇಲಾಖೆಯ ನಾನೂನಿನನ್ವಯ 80G ನೋಂದಣಿಯನ್ನೂ ಮಾಡಲಾಗುವದು.

ನಮ್ಮ ಕನಸುಗಳು:
1. ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ನೀಡುವುದು, ಈ ಉದ್ದೇಶಕ್ಕಾಗಿ ಪ್ರತೀವರ್ಷವೂ ತಾಲೂಕಿನಾಧ್ಯಂತ ಪ್ರತಿಭಾನ್ವೇಷಣೆಯನ್ನು ಮಾಡುವುದು.
2. ಬಡ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸುವುದು.
3. ಹೆಚ್ಚಿನ ವ್ಯಾಸಂಗ ಮಾಡಬಯಸುವ ಮಕ್ಕಳಿಗೆ ಆನಿಟ್ಟಿನಲ್ಲಿ ಮಾರ್ಗದರ್ಶನ ವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಮಾಡಿಸುವುದು.
4. ನಮ್ಮ ಪಟ್ಟಣದಲ್ಲಿ ಸುಸಜ್ಜಿತವಾದ ಮತ್ತು ಎಲ್ಲಾ ಆಸಕ್ತ ಓದುಗರಿಗೆ ಅನೂಕೂಲವಾಗುವಂತಹ ಗ್ರಂಥಾಲಯದ ನಿರ್ಮಾಣ.
5. ನಮ್ಮ ಅತೀ ದೊಡ್ಡ ಕನಸೆಂದರೆ, ಆಳ್ವಾಸ್ ಶೈಕಣಿಕ ಸಂಸ್ಥೆಯ ರೀತಿಯಲ್ಲೇ ಯಲ್ಲಾಪುರದಲ್ಲಿ ಅಂಥಹ ಒಂದು ಶಿಕ್ಷಣ ಸಂಸ್ಥೆಯನ್ನು ಭವಿಷ್ಯದಲ್ಲಿ ಕಟ್ಟುವುದು.
6. ಅನಾಥ ಮಕ್ಕಳಿಗಾಗಿ ಸಮ್ಮ ಭಾಗದಲ್ಲಿ ಅನಾಥಾಲಯವನ್ನು ನಿರ್ಮಾಣ ಮಾಡುವುದು.
7. ನಮ್ಮ ನಾಡು, ನುಡಿ, ಸಂಸ್ಕೃತಿಯ ಏಳ್ಗೆಗಾಗಿ, ನಿಯಮಿತವಾಗಿ ಅಂತಹ ಸಾಂಕೃತಿಕ ಸಮಾರಂಭಗಳನ್ನು ನಡೆಸುವುದು. ಅಂಥಹ ಸಮಾರಂಭಗಳು ನಾಡಿನ ಹೆಮ್ಮೆಯ ಗರಿಮೆಗಾಳಾಗಿರಬೇಕೆನ್ನುವುದು ನಮ್ಮ ಅಪೇಕ್ಷೆ.

ಇಂತಹ ನೂರೊಂದು ಕನಸುಗಳನ್ನು ಹೊತ್ತು ನಾವು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದೇವೆ. ನಮ್ಮ ಭಾಗದ ಜನ, ನೆಲ, ಜಲ, ಪರಿಸರ, ಸಂಸ್ಕೃತಿಯ ಏಳ್ಗೆಗಾಗಿ ದುಡಿಯಬೇಕೆನ್ನುವ ನಿಮ್ಮೆಲ್ಲರ ಅಪೇಕ್ಷೆ, ಈ ಸಂಸ್ಥೆಯ ಮೂಲಕ ಸಾಕಾರಗೊಳ್ಳಲಿ ಎನ್ನುವುದು ನಮ್ಮ ಬಿನ್ನಹ.

ನಮ್ಮೆಲ್ಲರ ಅಂತಿಮ ಗುರಿ, ನಾವು ಮಾಡಿದ ಸಹಾಯಗಳು ಹೆಚ್ಚು ಸೂಕ್ತ ವ್ಯಕ್ತಿಗಳಿಗೆ ತಲುಪಬೇಕು, ಆಮೂಲಕ ಕಷ್ಟದಲ್ಲಿ ಇರುವವರಿಗೆ ಅದರಿಂದ ಪ್ರಯೋಜನವಾಗಬೇಕು. ಆ ಕಾರಣಕ್ಕಾಗಿ ಮೂರು ರೀತಿಯಲ್ಲಿ ಧನಸಂಗ್ರಹದ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ.

ಅವುಗಳೆಂದರೆ:
1. ಸಹಾಯಧನಕ್ಕಾಗಿ ವಾರ್ಷಿಕವಾಗಿ ದತ್ತಿನಿಧಿ ಸಂಗ್ರಹಣೆ.( ಪ್ರತಿವರ್ಷವೂ ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ನೀಡುವವರಿಗಾಗಿ )
2. ಸಂಸ್ಥೆಯ ಮೂಲನಿಧಿ ಸಂಗ್ರಹಣೆ. ( ಪ್ರತಿಷ್ಠಾನದ ಮೂಲ ನಿಧಿಗಾಗಿ ಧನ ಸಹಾಯ ಮಾಡುವವರಿಗಾಗಿ)
3. ಸರಕಾರ ಮತ್ತು ಇತರ ಸಂಸ್ಥೆಗಳಿಂದ ಸಹಾಯ. ( ಸರಕಾರ ಮತ್ತು ಸರಕಾರೇತರ ಸಂಸ್ಥೆಗಳಿಂದ ದೊರೆಯಬಹುದಾದ ಅನುದಾನ)

ಆದ್ದರಿಂದ ಹಿರಿಯರ ಒಂದು ಮಾತಿದೆ " ಎಲ್ಲಾ ಮಹತ್ಕಾರ್ಯಗಳು ಸಾಧಿತವಾಗಿದ್ದು, ಚಿಕ್ಕಚಿಕ್ಕ ಕನಸುಗಳಿರುವ ದೊಡ್ಡ ವ್ಯಕ್ತಿಗಳಿಂದ ಅಲ್ಲ, ಬದಲಾಗಿ ಅದು ಸಾಧ್ಯವಾಗಿರುವದು ದೊಡ್ಡದೊಡ್ಡ ಕನಸುಗಳಿರುವ ಚಿಕ್ಕ ವ್ಯಕ್ತಿಗಳಿಂದ ಮಾತ್ರ". ಹಾಗಾಗಿ ನಾವೆಲ್ಲಾ ಚಿಕ್ಕ ವ್ಯಕ್ತಿಗಳು ಸೇರಿ ತಳೆದಂತ ಈ ಕನಸುಗಳ ಸಾಕಾರಕ್ಕಾಗಿ ನಿಮ್ಮೆಲ್ಲರ ಸಹಕಾರ ಅತ್ಯವಶ್ಯ. ಈ ಕಾರ್ಯದಲ್ಲಿ ನೀವು ನಮ್ಮ ಬಗ್ಗೆ ತೋರುವ ವಿಶ್ವಾಸ, ಆಸಕ್ತಿಯೇ ನಮಗೆ ಶ್ರೀರಕ್ಷೆ. ನಿಮ್ಮ ಅಮೂಲ್ಯ ಸಲಹೆಯ ಜೊತೆಗೆ ಧನಸಹಾಯವನ್ನೂ ಮಾಡಿ ಪ್ರೋತ್ಸಾಹಿಸಿ.

ಕನಸುಗಳು ನಿಮ್ಮಿಂದ ಸಾಕಾರಗೊಳ್ಳಲಿ,

ನಿಮ್ಮವನಾದ,

ಶ್ರೀಪತಿ ಭಟ್.
ಕಾರ್ಯದರ್ಶಿ
ಸಂವಿತ್ ಪ್ರತಿಷ್ಠಾನ (ರಿ)
ಈ ವಿಷಯಗಳಿಗಾಗಿ ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:

ಸಂವಿತ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನ (ರಿ)
ಕೆ ಬಿ ರಸ್ತೆ, ಯಲ್ಲಾಪುರ- 581 359 ( ಉತ್ತರ ಕನ್ನಡ)
ಪೋನ್ ಸಂಖ್ಯೆ: (08419)261049
ಮೊಬೈಲ್: 9900770650 (ಶ್ರೀಪತಿ ಭಟ್) ಈ ಮೇಲ್ ವಿಳಾಸ: bhat.shripati@gmail.com

KNOWING AND BELIEVING

There is a huge difference between "knowing" and "believing". In philosophy, we always say "Know yourself". Th...