Sunday, October 3, 2010

'ಕನಸು’ ನಮ್ಮ ಸಾಧನೆಗೆ ಪ್ರೇರಕ.

ನಾನು ಹಲವು ಸಾರಿ ಈ “ಕನಸು” ಎನ್ನುವ ಪದದ ಬಗ್ಗೆ, ಅದರ ಅರ್ಥ ವಿವರಣೆಯ ಬಗ್ಗೆ, ಅದರ ವ್ಯಾಪ್ತಿಯ ಬಗ್ಗೆ, ವಿಚಾರ ಮಾಡ್ತಾ ಇರ್ತೇನೆ. ಬಹುಷಃ ಕನಸೇ ಇಲ್ಲದಿದ್ದರೆ ಈ ಜಗತ್ತಿನ ಅತ್ಯದ್ಭುತ ವೈಜ್ನಾನಿಕ ಅನ್ವೇಷಣೆಗಳು ಇರುತ್ತಿರಲಿಲ್ಲ, ಈ ಜಗತ್ತಿನಲ್ಲಿ ಇಷ್ಟೆಲ್ಲಾ ವೈವಿದ್ಯತೆಗಳು ಇರುತ್ತಿರಲಿಲ್ಲ, ಹಾಗೆಯೇ ಬಹುಷ ನಮ್ಮ ಅಸ್ತಿತ್ವವೇ ಇರುತ್ತಿರಲಿಲ್ಲವೇನೊ....

ಹಾಗಾಗಿ ನಾವು ಈಗ ಮಾಡಬೇಕಾದದ್ದು, ನಮ್ಮ ಮಕ್ಕಳಿಗೆ ಕನಸು ಕಾಣಲು ಬಿಡುವುದು. ಅವರನ್ನು ಅವರಂತೆಯೇ ಇರಲು ಬಿಡುವುದು. ಒಂದು ಸಣ್ಣ ಎಳೆ ಚಿಗುರಿಗೂ ಕೂಡ ಒಂದು ಕನಸಿರುತ್ತದಂತೆ, ಅದೆಂದರೆ, ತಾನು ಚಿಗುರೊಡೆದು ಹೆಮ್ಮರವಾಗಿ ಬೆಳೆದು ಫಲ ಕಾಣಬೇಕೆನ್ನುವುದು. ಹಾಗಾಗಿ ಅದು ಚಿಗುರೊಡೆಯುವುದನ್ನು ನೀವು ತಪ್ಪಿಸೋದಕ್ಕಾಗಲ್ಲ, ನೀವು ಒಂದು ಕಡೆ ಚಿವುಟಿದರೆ ಅದು ಇನ್ನೊಂದೆಡೆ ಟಿಸಿಲೊಡೆಯುತ್ತದೆ. ಹಾಗಾಗಿ ನಮ್ಮ ಮಕ್ಕಳ ಬದುಕಿನಲ್ಲೂ ಒಂದು ರೀತಿಯ ಸಹಜತೆ ಇರಲಿ. ನಮ್ಮ ಅಹಮಿಕೆಯ ಉಗುರಿನಿಂದ ಅವರ ಕನಸಿನ ಚಿಗುರನ್ನು ಚಿವುಟುವುದು ಬೇಡ.

ಆದರೆ ನಮ್ಮ ಬಾದ್ಯತೆ ಇರುವುದು ಅವರಿಗೆ ಧನಾತ್ಮಕವಾಗಿ ಬೆಳೆಯುವ ಪರಿಸರ ನೀಡುವುದು. ಆದಷ್ಟು ಮಟ್ಟಿಗೆ ಹೊರಗಿನ ಪ್ರಾಣಿಗಳು ತಿನ್ನದಂತೆ ಗಿಡಗಳಿಗೆ ಟ್ರೀ ಗಾರ್ಡ್ ಇಡುತ್ತಾರಲ್ಲಾ.... ಹಾಗೆ. ನಾವು ನಮ್ಮ ಮಕ್ಕಳ ರಕ್ಷಕರಾಗಬಹುದು, ವಿನಃ, ಅವರ ಕನಸಿಗೆ ಭಂಗ ತರುವ ಯಾವ ಹಕ್ಕೂ ಕೂಡ ನಮಗಿಲ್ಲ.

’ಕನಸು’ ನಮ್ಮ ಸಾಧನೆಗೆ ಪ್ರೇರಕ. ನಾನು ಹೇಳೋದು ನಕ್ಷತ್ರಗಳನ್ನು ಹಿಡಿದು ತರಬೇಕೆನ್ನುವ ಕನಸಲ್ಲ. ಬದಲಾಗಿ, ಕನಸುಗಳು ಸಾಧ್ಯತೆಯ ಪರಿಧಿಯಲ್ಲಿ ಇರಬೇಕು. ಜೊತೆಯಲ್ಲಿ ಅದನ್ನು ಸಾಧಿಸಬೇಕೆನ್ನುವ ಛಲ ಒಡಮೂಡಬೇಕು. ನಮ್ಮ ಕನಸುಗಳು ಒಡಮೂಡುವುದು ಸೃಜನಶೀಲತೆಯಿಂದ. ಸೃಜನಾತ್ಮಕತೆ ಹೊರಹೊಮ್ಮುವುದು ಅವಲೋಕಿಸುವವನ ದೃಷ್ಠಿಯಿಂದ. ಅವಲೋಕಿಸುವ ವಸ್ತು ಒಂದೇ ಆಗಿರಬಹುದು, ಆದರೆ ಒಬ್ಬ ಸೃಜನಶೀಲ ವ್ಯಕ್ತಿಯ ಅವಲೋಕನಕ್ಕೂ, ಒಬ್ಬ ಸಾಮಾನ್ಯ ವ್ಯಕ್ತಿಯು ಅವಲೋಕಿಸುವುದಕ್ಕೂ ಇರುವ ವ್ಯತ್ಯಾಸವೇ ಸೃಜನಶೀಲ ಕನಸಿನ ಹುಟ್ಟು.

No comments:

Post a Comment

KNOWING AND BELIEVING

There is a huge difference between "knowing" and "believing". In philosophy, we always say "Know yourself". Th...